Wednesday, November 16, 2016

ಕಸ್ತೂರಿ ಕನ್ನಡ ಸಾಲು

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!
-ಜಿ.ಪಿ.ರಾಜರತ್ನಂ

ಈ ಪದಗಳಿಂದ ಪ್ರೇರಿತನಾಗಿ ,ನನ್ನ ಕಲ್ಪನೆಯನ್ನು ಕನ್ನಡ ಪದಗಳಲ್ಲಿ ಬಣ್ಣಿಸುವ ಸಣ್ಣ ಪ್ರಯತ್ನ .... 

ಕೋಟೆಯಲಿ ಕಣ್ಮುಚ್ಚಿ ಕೈಲೊಂದು ಕಲ್ಕೊಟ್ಟರೆ   
ಕಸ್ತೂರಿ ಕನ್ನಡವನ್ನೇ ನಾ ಕೆತ್ತುವೆ ।
ಕಿವಿಮುಚ್ಚಿ ಹೊರನೂಕಿ ಕೊಟ್ಟಿಗೆಯಲಿಟ್ಟರೂ 
ಕರುವಿನ ಕೂಗಲು ಕನ್ನಡವ ಕೇಳುವೆ ।।

ಕೆಸರಲ್ಲಿ ಹೊತ್ತೊಯ್ದು ಕಾಲ್ಜಾರಿ ಕೆಳಬಿದ್ದರೂ 
ಕೈಯೂರಿ ಮೇಲೆದ್ದು ತಾಯ ಭಾವುಟವ ಮೇಲೆತ್ತುವೆ ।
ಕಾಡಿನಲಿ ಅತಿನಡೆದು ಹಾದಿ ತಪ್ಪಲು 
ಶ್ರೀಗಂಧದ ಸುಮವಿಡಿದು ನಮ್ಮ ನಾಡ ಸೇರುವೆ ।।

ಕೈಸನ್ನೆ ಮೈಸನ್ನೆ ಮಾಡದಿದ್ದರೂ 
ಮನಸ್ಸೊಡನೆ ಕನ್ನಡದಿ ಮಾತಾಡುವೆ ।
ಕುಂಬಾರನ ಕಸಬ ನಾ ಕಲಿತರೆ 
ಮಣ್ಣ ಮಡಕೆಯ ಮೇಲೆ ಭೂಪಟವ ರಚಿಸುವೆ ।।

                                               --ಗೋ ನಾ ರಾಮಕೃಷ್ಣ ಭಟ್ 

Tuesday, November 15, 2016

ಭಗ್ನ ಪ್ರೇಮಿ

ಮರಳು ಮಾಡಿದಳು ನನ್ನ ಮನದನ್ನೆ ಮನೋರಮೆ
ತಿರುಗಿ ನೋಡದೆ ತಿಲಾಂಜಲಿಯಿಟ್ಟು ಹೋದಳೀ ತಿಲೋತ್ತಮೆ ।
ಮಂಕು ಮಾಡಿ ಮರೆಯಾದವಳು ಮತ್ತೆ ಬರುವಳೆಂದು 
ಸಂಭ್ರಮಿಸುವುದೇ ನನ್ನ ಭ್ರಮೆ ।।

ಗೆಳತಿ ,ಆಸೆ ಬೆಂಬತ್ತಿದ ನಿನಗೆ ,ಸಿಗಬಹುದು ಬಹಳ ಆಸ್ತಿ ।
ತಿಳಿದಿರಲಿ ಸಿಗುವುದಿಲ್ಲ ನಿನಗೆ ,ನನಗಿಂತಲೂ ಪ್ರೀತಿ ಮಾಡುವವ ತುಂಬಾ ಜಾಸ್ತಿ ।।

ಮೊಳಗಿದೆ ಒಳಗಿಂದ ಸುಮಧುರ ಹೃದಯವಾಣಿ ।
ಹೋಗಬೇಕು ನಿಲುಕದಷ್ಟು ದೂರ ,ನೀ ಬಳಸಿದರೂ ದೂರವಾಣಿ ।।

ಕೇಳಲಿಲ್ಲ ನಿನ್ನ, ಏಕೆ ದೂರದೇ ಎಂಬ ಪ್ರಶ್ನೆಗೆ ಉತ್ತರ ।
ತಿಳಿದಿದೆ ಕಾರಣವೂ ನನಗೆ, ನೀ ದಕ್ಷಿಣ ನಾ ಉತ್ತರ ।।

ಚೆಲುವೇ , ಕಿವಿ ಆಲಿಸಿ ಕೇಳು ನನ್ನ ಕಡೆ ಮಾತೊಂದ ।
ನಿನ್ನ ವಿದಾಯ ,ನನ್ನ ಹೊಸ ಸುಖ ಜೀವನದ ನವ ಅಧ್ಯಾಯ ।।

                                                              ---ಗೋ ನಾ ರಾಮಕೃಷ್ಣ ಭಟ್